ಬಬ್ರುವಾಹನ

ವಿಕಿಕೋಟ್ದಿಂದ

ಬಬ್ರುವಾಹನ : ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತೀವ್ರತೆಯನ್ನು ನಿಂದಿಸಿದ ಮರುಕ್ಷಣವೆ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ ಪಾಪದ ಮೂಟೆ ನಿನ್ನ ಹೆಗಲು ಹತ್ತಿದೆ. ಹಮ್.. ಎತ್ತು ನಿನ್ನ ಗಾಂಢಿವಾ ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ ಅಥವ ಶಿವನನ್ನು ಗೆದ್ದೆ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.

‍ಅರ್ಜುನ : ಮದಾಂಧ, ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ. ಸುರಲೋಖಕ್ಕೆ ಸೋಪಾನ ಕಟ್ಟಿ, ಮತ್ಸ್ಯಯಂತ್ರವನ್ನು ಭೇದಿಸಿ ರಣರಂಗದಲ್ಲಿ ವೀರವಿಹಾರ ಮಾಡಿದ ಅರ್ಜುನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ.

ಬಬ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ. ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ. ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ. ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ. ಜಯವ ತಂದಿತ್ತ ಆ ಯದುನಂದನ. ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ.

‍ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ. ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ. ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ. ಉಗ್ರಪ್ರತಾಪೀ.

ಬಬ್ರುವಾಹನ : ಓ ಹೊ ಒ ಹೋ ಉಗ್ರಪ್ರತಾಪಿ ಆ! ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ. ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು. ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು. ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ. ಖಂಡಿಸಿದೇ ಉಳಿಸುವೆ. ಹೋಗೊ ಹೋಗೆಲೋ ಶಿಖಂಡಿ.

‍ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ. ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ. ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ.

ಬಬ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ. ಊಡು ಬಾಣಗಳ ಮಾಡುವೆ ಮಾನಭಂಗ.

‍ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ.

ಬಬ್ರುವಾಹನ : ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ.

‍ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ.

ಬಬ್ರುವಾಹನ : ಅಂತಕನಿಗೆ ಅಂತಕನು ಈ ಬಭ್ರುವಾಹನ.